ಯಕ್ಷಗಾನ ಪ್ರಿಯರ ತೆಂಕುತಿಟ್ಟು ವೇದಿಕೆ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಶುಕ್ರವಾರ, ಜೂನ್ 26 , 2015
|
ಜೂನ್ 26, 2015
|
ಯಕ್ಷಗಾನ ಪ್ರಿಯರ ತೆಂಕುತಿಟ್ಟು ವೇದಿಕೆ
ಉಡುಪಿ :
ಕರಾವಳಿಯ ಯಕ್ಷಗಾನ ತೆಂಕು - ಬಡಗು - ಬಡಾಬಡಗು ಎಂಬ ಪ್ರಕಾರಗಳಲ್ಲಿ ಜನಪ್ರಿಯವಾಗಿದೆ. ಮೂರೂ ತಿಟ್ಟುಗಳಿಗೂ ಅವುಗಳದ್ದೇ ಆದ ಪ್ರೇಕ್ಷಕರಿದ್ದಾರೆ. ಪ್ರತಿಯೊಂದು ತಿಟ್ಟು ಕೂಡ ತನ್ನದೇ ಸ್ವರೂಪ ವೈಶಿಷ್ಟ್ಯದಿಂದ ಅನನ್ಯವಾಗಿದೆ.
ಪ್ರೇಕ್ಷಕರ ಅಭಿರುಚಿಗನುಸರಿಸಿ ಪ್ರಾದೇಶಿಕವಾಗಿ ತೆಂಕು-ಬಡಗು ಅಭಿಮಾನಿಗಳ ಸಂಖ್ಯೆ ಧಾರಾಳ ಇದೆ. ಈ ಎರಡೂ ತಿಟ್ಟುಗಳ ಗಡಿಪ್ರದೇಶ ಉಡುಪಿ.
ಇಲ್ಲಿ ತೆಂಕುತಿಟ್ಟಿನ ಯಕ್ಷಗಾನಕ್ಕೆ ಇನ್ನಷ್ಟು ಕಳೆ ನೀಡುವ ಉದ್ದೇಶದಿಂದ ಸ್ಥಾಪನೆಯಾದ ವೇದಿಕೆಯೇ ತೆಂಕುತಿಟ್ಟು ವೇದಿಕೆ, ಉಡುಪಿ.
ಉಡುಪಿಯ ಸುಧಾಕರ ಆಚಾರ್ಯ ಅವರು ಕಳೆದ 25 ವರುಷಗಳಿಂದ ಆಚರಿಸಿಕೊಂಡು ಬಂದಿರುವ ಸ್ವಾತಂತ್ರೊತ್ಸವ ತಾಳಮದ್ದಳೆ ಬಹಳ ಜನಪ್ರಿಯ. ಕಳೆದ ವರುಷ ಬೆಳ್ಳಿಹಬ್ಬ ಆಚರಿಸಿಕೊಂಡ ಸವಿನೆನಪಿನ ಸಂದರ್ಭದಲ್ಲಿ ತೆಂಕುತಿಟ್ಟು ಯಕ್ಷಗಾನ ಪ್ರದರ್ಶನವನ್ನು ಏರ್ಪಡಿಸಬೇಕೆಂಬ ಸಂಕಲ್ಪ ಮೂಡಿತ್ತು. ಸಮಾನ ಮನಸ್ಕರಾದ ನೀರ್ಚಾಲಿನ ಎಂ.ಡಿ. ಗಣೇಶ್, ಉಜಿರೆ ಮೂಲದ ಎಂ.ಎಸ್. ವಿಷ್ಣು, ಪ್ರದೀಪ್ಕುಮಾರ್, ಕುಂಬ್ಳೆಯ ಮೂಲದ ಕಿಶೋರ್ ಸಿ. ಉದ್ಯಾವರ ಇವರೆಲ್ಲರೂ ಸೇರಿ ಡಾ| ನಿ. ಬೀ. ವಿಜಯ ಬಲ್ಲಾಳರು, ಶ್ರೀಕ್ಷೇತ್ರ ಕಟೀಲಿನ ಅನಂತಪದ್ಮನಾಭ ಆಸ್ರಣ್ಣರು, ತುಳುಕೂಟದ ಗೌರವಾಧ್ಯಕ್ಷರಾದ ಡಾ| ಭಾಸ್ಕರಾನಂದ ಕುಮಾರ್ ಮೊದಲಾದ ಗಣ್ಯರಿಂದ ಉದ್ಘಾಟನೆಯಾದ ವೇದಿಕೆಯೇ ತೆಂಕುತಿಟ್ಟು ವೇದಿಕೆ ಉಡುಪಿ. ವಾರ್ಷಿಕ ಕನಿಷ್ಟ ಒಂದು ಅಥವಾ ಎರಡು ತೆಂಕು ಯಕ್ಷಗಾನ ಪ್ರದರ್ಶನವನ್ನು ಉಚಿತವಾಗಿ ನೀಡುವುದು ಇದರ ಉದ್ದೇಶ. ಜತೆಗೆ ಹಿರಿಯ ಕಲಾವಿದರಿಗೆ ಸಮ್ಮಾನ.
ತೆಂಕುತಿಟ್ಟು ವೇದಿಕೆ ಇದರ ದ್ವಿತೀಯ ವರುಷದ ಸಮಾರಂಭ ಜೂ.27ರಂದು ಉಡುಪಿಯ ರಾಜಾಂಗಣದಲ್ಲಿ ಸಾಕಾರಗೊಳ್ಳಲಿದೆ. ಅಂದು ವೇದೋದ್ಧರಣ, ಅಭಿಮನ್ಯು, ಶ್ರೀನಿವಾಸ ಕಲ್ಯಾಣ ಎಂಬ ಮೂರು ಪ್ರಸಂಗಗಳ ಪ್ರದರ್ಶನ ಇಡೀ ರಾತ್ರಿ ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರ ಸಮ್ಮಿಲನದಿಂದ ನಡೆಯಲಿದೆ.
ಈ ಸಂದರ್ಭದಲ್ಲಿ ತೆಂಕುತಿಟ್ಟು ಯಕ್ಷಗಾನದ ಹಾಸ್ಯಚಕ್ರವರ್ತಿ ಮಿಜಾರು ಅಣ್ಣಪ್ಪ ಅವರಿಗೆ ಪ್ರಶಸ್ತಿ ಹಾಗೂ ರೂ. 10,000 ಕ್ಷೇಮ ನಿಧಿಯನ್ನು ಪ್ರದಾನ ಮಾಡುವ ಕಾರ್ಯಕ್ರಮವೂ ಇದೆ.
ತೆಂಕುತಿಟ್ಟು ಯಕ್ಷಗಾನದ ಪ್ರೇಕ್ಷಕ ಸಂವರ್ಧನೆಯ ಲಕ್ಷ್ಯವಿರಿಸಿ ಕೈಗೊಂಡ ಈ ಕಾರ್ಯಕ್ರಮ ಉಡುಪಿ ಶ್ರೀ ಕೃಷ್ಣ ಮಠ ಹಾಗೂ ಪರ್ಯಾಯ ಶ್ರೀಗಳ ಆಶ್ರಯದಲ್ಲಿ ನಡೆಯಲಿದೆ. ಜೂನ್ 27ರ ಶನಿವಾರ ಸಂಜೆ 7.00ರಿಂದ ಆರಂಭಗೊಳ್ಳುವ ಪ್ರದರ್ಶನದಲ್ಲಿ ಮೊದಲಿಗೆ ಕಟೀಲು ಶ್ರೀದುರ್ಗಾ ಮಕ್ಕಳ ಮೇಳ ದವರಿಂದ ತೆಂಕುತಿಟ್ಟು "ಪೂರ್ವರಂಗ' ಪ್ರದರ್ಶನಗೊಳ್ಳಲಿದೆ. ಯಕ್ಷಗಾನ ರಂಗದಿಂದ ಮರೆಯಾದ ಷಣ್ಮುಖ ಸುಬ್ರಾಯ ಹಾಗೂ ಇನ್ನಿತರ ಸಾಂಪ್ರದಾಯಿಕ ವೇಷಗಳ ಕುಣಿಕೆಗಳನ್ನು ಪ್ರಸಾದ್ ಬಲಿಪರ ನಿರ್ದೇಶನದಲ್ಲಿ ಮೂಡಿ ಬರಲಿದೆ.
ಕೃಪೆ :
udayavani
|
|
|